ಉಜಿರೆ ಯಕ್ಷಗಾನ ತಾಳಮದ್ದಳೆ ಬಯಲಾಟ ಸಪ್ತಾಹ
ಲೇಖಕರು : ಲಕ್ಷ್ಮಿ ಮಚ್ಚಿನ
ಶನಿವಾರ, ನವ೦ಬರ್ 21 , 2015
|
ನವ೦ಬರ್ 21, 2015
|
ಉಜಿರೆ ಯಕ್ಷಗಾನ ತಾಳಮದ್ದಳೆ ಬಯಲಾಟ ಸಪ್ತಾಹ
ಉಜಿರೆ :
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಹಾಗೂ ನೆಡೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ ವತಿಯಿಂದ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹ ಹಾಗೂ ಯಕ್ಷಗಾನ ಬಯಲಾಟ ಸಪ್ತಾಹ ಜಿಲ್ಲೆಯ ಹಲವೆಡೆಯಿಂದ ಆಗಮಿಸಿದ ಕಲಾಭಿಮಾನಿಗಳಿಗೆ ಕಲೌತಣ ನೀಡಿತು.
ಯಕ್ಷಗುರು ಸೂರಿಕುಮೇರಿ ಕೆ. ಗೋವಿಂದ ಭಟ್ಟರಿಗೆ 75 ವಸಂತಗಳಾದ ಸಂದರ್ಭ, ಯಕ್ಷಕಿಶೋರಿ ರಂಜಿತಾಗೆ 15 ವಸಂತಗಳು ತುಂಬಿದ ಸಂದರ್ಭ. ಇದರ ಬೆಸುಗೆಗೆ ಭಾಗವತಹಂಸ ಪುತ್ತಿಗೆ ರಘುರಾಮ ಭಾಗವತರಿಗೆ 60 ತುಂಬಿದ ಹರ್ಷ. ರಕ್ತಬೀಜ, ಮದಿರಾಕ್ಷ, ಮಾಗಧ, ಹನೂಮಂತ, ಅರ್ಜುನ, ಜಾಂಬವ, ವಿಶ್ವಾಮಿತ್ರ ಪ್ರಸಂಗಗಳು. ಗೋವಿಂದ ಭಟ್ಟರ ಇಳಿವಯಸ್ಸಿನಲ್ಲಿ ಶೃಂಗಾರ, ಧೀರೋದಾತ್ತ, ಪ್ರೌಢ, ದಾಸಭಕ್ತಿಯ ಪಾತ್ರಗಳ ನಿರ್ವಹಣೆ ಕಲಾ ರಸಿಕರ ಮನಸೂರೆಗೊಂಡಿತು. ಅವರ ಅಭಿನಯದಲ್ಲಿ ಮಾಗಿದ ಅನುಭವ ವ್ಯಕ್ತವಾಗುತ್ತಿತ್ತು. ಸಪ್ತಾಹದ ಅಷ್ಟೂ ದಿನವೂ ದಿನದಿಂದ ದಿನಕ್ಕೆ ಅವರು ಪಾತ್ರಗಳ ನಿರ್ವಹಣೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುತ್ತಾ ಸಾಗಿದರು.
ಅಂತೆಯೇ ಕಲಾಕ್ಷೇತ್ರದಲ್ಲಿ 4 ದಶಕಗಳ ಅನುಭವ ಪಡೆದ, ಜೀವನದಲ್ಲಿ 60 ವಸಂತಗಳನ್ನು ದಾಟಿದ ಧರ್ಮಸ್ಥಳ ಮೇಳದ ಭಾಗವತ ಶ್ರೇಷ್ಠ ಪುತ್ತಿಗೆ ರಘುರಾಮ ಹೊಳ್ಳರು ಸುಶ್ರಾವ್ಯ ಸತ್ವಯುತವಾದ ಧ್ವನಿಯ ಮೂಲಕ ಪ್ರಸಂಗವನ್ನು ಪ್ರತಿದಿನ ಕಳೆಗಟ್ಟಿಸತೊಡಗಿದರು. ಯಕ್ಷಗಾನೀಯವಾದ ಹಾಡುಗಳು, ಯಾವುದೇ ಗಿಮಿಕ್ಸ್ ಇಲ್ಲದೇ ಅವರು ಪ್ರಸಂಗವನ್ನು , ಆಟವನ್ನು ಮೇಲಕ್ಕೆತ್ತುವ ಸಾಮರ್ಥ್ಯ ಹೊಂದಿದ್ದು ಮತ್ತೂಮ್ಮೆ ಶ್ರುತಪಟ್ಟಿತು. 15 ವಸಂತಗಳನ್ನು ಪೂರೈಸಿದ ರಂಜಿತಾ ಎಲ್ಲೂರು ಕಿರಿಯ ವಯಸ್ಸಿನಲ್ಲಿ ಹಿರಿಯರ ಸಮದಂಡಿಯಾಗಿ ಪಾತ್ರ ನಿರ್ವಹಿಸಿ ಭರವಸೆಯ ಕಲಾವಿದೆಯಾದರು.
ಗೋವಿಂದ ಭಟ್ಟರ ವಿಶ್ವಾಮಿತ್ರನ ಜತೆ ಮೇನಕೆಯಾಗಿ ಪಾತ್ರ ವಿಜೃಂಭಿಸಿದ್ದು ಸಾವಿರ ಏಕವ್ಯಕ್ತಿ ಕಾರ್ಯಕ್ರಮದ ಸರದಾರ ಮಂಟಪ ಪ್ರಭಾಕರ ಉಪಾಧ್ಯಾಯರು. ನೃತ್ಯ, ಅಭಿನಯ, ಹಾವ, ಭಾವ, ಚೇಷ್ಟೆ , ಅದಕ್ಕೆ ಸರಿ ಮಿಗಿಲಾಗಿ ಗೋವಿಂದ ಭಟ್ಟರ ಶೃಂಗಾರ ಅಭಿನಯ ಸಾಂಗತ್ಯ. ಹಿನ್ನೆಲೆಯಲ್ಲಿ ಹೊಳ್ಳರ ಪದ್ಯಗಳು. ಒಟ್ಟು ಪ್ರದರ್ಶನದಲ್ಲಿ ಕಲಾಭಿವಂತಿಕೆಯ ಹುಚ್ಚೆಬ್ಬಿಸಿದವು.
ಧ್ರುವ, ಪ್ರಹ್ಲಾದ, ಚಂದ್ರಹಾಸ, ಏಕಲವ್ಯ, ಅಭಿಮನ್ಯು, ಶುನಶೆÏàಪ, ಕುಶಲವ ತಾಳಮದ್ದಳೆಯಲ್ಲಿ ರಮೇಶ್ ಭಟ್, ಪ್ರಫುಲ್ಲಚಂದ್ರ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸುಬ್ರಹ್ಮಣ್ಯ ಧಾರೇಶ್ವರ, ಕುಬಣೂರು ಶ್ರೀಧರ ರಾವ್, ರಾಘವೇಂದ್ರ ಆಚಾರ್ ಜನ್ಸಾಲೆ, ರವಿಚಂದ್ರ ಕನ್ನಡಿಕಟ್ಟೆ, ಕುರಿಯ ಗಣಪತಿ ಶಾಸ್ತ್ರಿಗಳ ಪದ್ಯಗಳು ಗಾನಲೀನವಾಗಿಸಿ ದವು. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಬರೆ ಕೇಶವ ಭಟ್, ಕೋಳ್ಯೂರು ರಾಮಚಂದ್ರ ರಾವ್, ಡಾ| ಪ್ರಭಾಕರ ಜೋಷಿ, ಉಮಾಕಾಂತ ಭಟ್, ಜಬ್ಟಾರ್ ಸಮೋ, ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್, ಕುಂಬ್ಳೆ ಸುಂದರ ರಾವ್ ಮೊದಲಾದವರ ಪ್ರೌಢ ಮಾತುಗಾರಿಕೆ ಒಟ್ಟು ಸಪ್ತಾಹಕ್ಕೆ ಮೆರುಗು ತಂದಿತು. ಭಾಗವತ ಕಾಳಿಂಗ ನಾವಡರ 25ರ ಸ್ಮೃತಿ ಗೌರವ ನಡೆಯಿತು. ಹೊಸ್ತೋಟ ಮಂಜುನಾಥ ಭಾಗವತರಿಗೆ ಕುರಿಯ ಪ್ರಶಸ್ತಿ ನೀಡಲಾಯಿತು. ಒಟ್ಟಂದದಲ್ಲಿ ಅಶೋಕ ಭಟ್ಟರ ನೇತೃತ್ವದಲ್ಲಿ ಕುರಿಯ ಪ್ರತಿಷ್ಠಾನ ಇತರ ಸಂಸ್ಥೆಗಳ ಜತೆಗೂಡಿ ನಡೆಸಿದ ಉತ್ತಮ ಕಲಾಸಂಭ್ರಮ.
ಕೃಪೆ :
udayavani
|
|
|